ನೆಲಕಚ್ಚಿದ ಮೆಣಸಿನಕಾಯಿ ದರ, ಬೆಳೆ ಮಾರಲು ರೈತರಿಂದ 500 ಕಿ.ಮೀ. ಪ್ರಯಾಣ!

 ಮೆಣಸಿನಕಾಯಿ ದರ ಭಾರೀ ಇಳಿಕೆ ಕಂಡಿದ್ದು, ಬೆಲೆ ಇಲ್ಲದೆ ರಾಯಚೂರಿನ ಬೆಳೆಗಾರರು ಮೆಣಸಿನಕಾಯಿ ತುಂಬಿಕೊಂಡು ಕರ್ನಾಟಕ ಕರಾವಳಿ ತೀರದವರೆಗೂ ಹೋಗಿದ್ದಾರೆ. ಮೆಣಸು ಮಾರಲು 500 ಕಿ.ಮೀ ದೂರ ಕ್ರಮಿಸಿ 250-300 ರೂ.ಗೆ ಕೆಜಿ ಮೆಣಸಿನಕಾಯಿಯನ್ನು ಮಾರಾಟ ಮಾಡುತ್ತಿದ್ದಾರೆ. ರಾಯಚೂರಿನಲ್ಲಿ ದಲ್ಲಾಳಿಗಳು ಅತ್ಯಂತ ಕಡಿಮೆ ಬೆಲೆಗೆ ಮೆಣಸು ಕೇಳುತ್ತಿದ್ದು, ಕರಾವಳಿ ಭಾಗದಲ್ಲಾದರೂ ಬೆಲೆ ಸಿಗಬಹುದು ಎಂದು ಲಾರಿಯಲ್ಲಿ ತುಂಬಿಕೊಂಡು ಬಂದಿದ್ದೇವೆ ಎಂದು ರೈತರು ಪರಿಸ್ಥಿತಿ ವಿವರಿಸಿದ್ದಾರೆ.



ಮಳೆ ಕೊರತೆಯಿಂದ ಎದುರಾದ ಬರದ ನಡುವೆಯೂ ಕಷ್ಟಪಟ್ಟು ಉಳಿಸಿಕೊಂಡ ಬೆಳೆಗೆ ಸರಿಯಾದ ಬೆಲೆ ಸಿಗದೇ ಇದ್ದರಿಂದ ರೈತರ ತಂಡವೊಂದು ನಷ್ಟ ತಪ್ಪಿಸಿಕೊಳ್ಳಲು ವರ್ಷದ ಬೆಳೆ ಹೊತ್ತು 500 ಕಿಲೋ ಮೀಟರ್ ಪ್ರಯಾಣ ಮಾಡಿ ಕರಾವಳಿ ತೀರಕ್ಕೆ ಬಂದಿದೆ.

ರಾಯಚೂರು ಜಿಲ್ಲೆಯ ಪೋತ್ನಾಳ ಗ್ರಾಮದ ಐದಾರು ರೈತ ಕುಟುಂಬ ಕಷ್ಟಪಟ್ಟು ಬೆಳೆದ ಮೆಣಸಿನ ಬೆಳೆಯೊಂದಿಗೆ ಕಾರವಾರ ತೀರಕ್ಕೆ ಬಂದಿದೆ. ಎರಡು ಲಾರಿ, ನಾಲ್ಕು ಗೂಡ್ಸ್ ವಾಹನದೊಂದಿಗೆ ರಾಶಿ ರಾಶಿ ಒಣ ಮೆಣಸು ಹೊತ್ತು ಕರಾವಳಿ ಭಾಗದಲ್ಲಿ ಮಾರಾಟಕ್ಕೆ ಇಳಿದಿದೆ. ಪ್ರತಿ ಕೆ.ಜಿ. ಒಣ ಮೆಣಸಿಗೆ 250-300 ರೂ.ವರೆಗೆ ಮಾರಾಟ ಮಾಡುತ್ತಿದ್ದಾರೆ. ಒಂದೇ ಸಮನೆ ರಾಶಿ ರಾಶಿ ಒಣಮೆಣಸು ಕಂಡು ಕರಾವಳಿ ಭಾಗದ ಜನರಲ್ಲೂ ಆಶ್ಚರ್ಯ ಹುಟ್ಟಿಸಿದೆ.

ಇದು ರಾಯಚೂರು ಭಾಗದಲ್ಲಿ ಬೆಳೆದ ಹೆಚ್ಚು ಖಾರವಿಲ್ಲದ ಬ್ಯಾಡಗಿ ತಳಿಯ ಕೆಂಪು ಒಣ ಮೆಣಸು ಎಂದು ರೈತರು ತಿಳಿಸಿದರು. ಬರ ಬಂದು ಹಾಗೋ ಹೀಗೋ ಬೆಳೆ ಉಳಿಸಿಕೊಂಡಿದ್ದೆವು. ಆದರೆ, ರಾಯಚೂರಿನಲ್ಲಿ ದಲ್ಲಾಳಿಗಳು ಅತ್ಯಂತ ಕಡಿಮೆ ಬೆಲೆಗೆ ಮೆಣಸು ಕೇಳುತ್ತಿದ್ದಾರೆ. ಹಾಗಾಗಿ ಕರಾವಳಿ ಭಾಗದಲ್ಲಾದರೂ ಬೆಲೆ ಸಿಗಬಹುದು ಎಂದು ಲಾರಿಯಲ್ಲಿ ತುಂಬಿಕೊಂಡು ಬಂದಿದ್ದೇವೆ ಎಂದು ರೈತರು ಪರಿಸ್ಥಿತಿ ಹೇಳಿಕೊಂಡರು.

ಉತ್ತರ ಕನ್ನಡ ಸೇರಿ ಕರಾವಳಿ ಭಾಗದಲ್ಲಿ ಮೀನು ಅಡುಗೆ ಮಸಾಲೆಗೆ ಒಣ ಮೆಣಸು ಹೆಚ್ಚಾಗಿ ಬಳಕೆಯಾಗುತ್ತದೆ. ಹಾಗಾಗಿ ಒಣ ಮೆಣಸಿಗೆ ಕರಾವಳಿ ಭಾಗದಲ್ಲಿ ಯಾವತ್ತೂ ಬೇಡಿಕೆ ಇದೆ. ಬ್ಯಾಡಗಿ ಮೆಣಸು ಒಂದು ಕೆಜಿಗೆ 450-600 ರೂ. ಇದೆ. ರಾಯಚೂರಿನಿಂದ ಬಂದ ರೈತರು ಬ್ಯಾಡಗಿ ಮೆಣಸಿನ ದರಕ್ಕಿಂತ ಅರ್ಧ ಬೆಲೆಯಲ್ಲಿ ಒಣ ಮೆಣಸು ಮಾರಾಟ ಮಾಡುತ್ತಿದ್ದಾರೆ. ಆದರೂ, ಖರೀದಿ ನಿರೀಕ್ಷೆಯಷ್ಟು ಇಲ್ಲ ಎನ್ನುತ್ತಾರೆ ರೈತರು

ಐದು ವರ್ಷಗಳ ಹಿಂದೆ ರಾಜ್ಯದಲ್ಲಿ ಇದೇ ರೀತಿ ಬರ ಪರಿಸ್ಥಿತಿ ಎದುರಾಗಿತ್ತು. ಆಗ ರಾಯಚೂರು ಭಾಗದ ರೈತರು ಒಣ ಮೆಣಸು ಮಾರಲು ಕರಾವಳಿ ಭಾಗಕ್ಕೆ ಬಂದಿದ್ದರು. ಅದರ ನಂತರ ಎಲ್ಲೆಡೆ ಅತಿವೃಷ್ಟಿ ಆಗುವಷ್ಟು ಮಳೆಯಾಗಿತ್ತು. ಐದು ವರ್ಷಗಳ ಬಳಿಕ ಮತ್ತೆ ಬರ ಸ್ಥಿತಿ ಎದುರಾಗಿದೆ. ಇಂಥ ಸ್ಥಿತಿಯಲ್ಲಿ ರೈತರು ಬುತ್ತಿ ಕಟ್ಟಿಕೊಂಡು ವರ್ಷದ ಬೆಳೆ ಹೊತ್ತು ಊರೂರು ತಿರುಗುತ್ತಿರುವುದು ರೈತರ ಕಷ್ಟದ ದಿನಗಳನ್ನು ತೋರಿಸುತ್ತಿದೆ.

ಈ ವರ್ಷ ಬರದ ಜತೆಗೆ ಬೆಳೆಗಳ ಬೆಲೆಯೂ ವ್ಯತ್ಯಾಸ ಆಗುತ್ತಿದೆ. ಊರಲ್ಲಿ ಸರಿಯಾದ ಬೆಲೆ ಸಿಕ್ಕಿಲ್ಲ. ಅದಕ್ಕೆ ಕರಾವಳಿ ಭಾಗಕ್ಕೆ ಬಂದಿದ್ದೇವೆ. ಕಾರವಾರದಲ್ಲಿ ವ್ಯಾಪಾರ ಆಗದೇ ಇದ್ದರೆ, ಉಡುಪಿ, ಮಂಗಳೂರು, ಗೋವಾ ಹೀಗೆ ಊರೂರು ಅಲೆಯುತ್ತೇವೆ. ವ್ಯಾಪಾರ ಆದರೆ ಸಾಕು ಎನ್ನುತ್ತಾರೆ ರಾಯಚೂರಿನ ಮೆಣಸು ಬೆಳೆಗಾರ ಬಸವರಾಜ.

ಕುಟುಂಬದೊಂದಿಗೆ ಅಲೆದಾಟ

ರಾಯಚೂರಿನ ರೈತ ಕುಟುಂಬಗಳು ದಂಪತಿ, ಮಕ್ಕಳೊಂದಿಗೆ ಕರಾವಳಿ ತೀರಕ್ಕೆ ಬಂದಿವೆ. ರಸ್ತೆ ಬದಿಯಲ್ಲಿ ಮನೆ ಮಂದಿಯೆಲ್ಲ ಮೆಣಸು ರಾಶಿ ಹಾಕಿ ಮಾರುತ್ತಿದ್ದಾರೆ. ಇಷ್ಟು ವರ್ಷ ಮನೆಯ ಗಂಡಸರು ಮೆಣಸು ಮಾರಲು ಹೋಗುತ್ತಿದ್ದರು. ಈ ವರ್ಷ ರಾಯಚೂರಿನಲ್ಲಿ ದಲ್ಲಾಳಿಗಳು ಕಡಿಮೆ ಬೆಲೆಗೆ ಮೆಣಸು ಕೇಳುತ್ತಿದ್ದಾರೆ. ಅದಕ್ಕೆ ಮನೆಯ ಗಂಡಸರೊಂದಿಗೆ ನಾವೂ ಮೆಣಸು ವ್ಯಾಪಾರ ಮಾಡಲು ಬಂದಿದ್ದೇವೆ. ಲಾಭ ಆಗದೇ ಇದ್ದರೂ, ನಷ್ಟ ಸರಿದೂಗಿಸಿಕೊಳ್ಳುವಷ್ಟು ವ್ಯಾಪಾರ ಆದರೆ ಸಾಕು ಎಂದು ರಾಯಚೂರಿನ ರೈತ ಮಹಿಳೆ ತಿಳಿಸಿದರು.

Previous Post Next Post

Ads

Ads

نموذج الاتصال

×