ಮಣಿಪುರದಲ್ಲಿ ಹಿಂಸಾಚಾರ ತಡೆಯಲು ಅಮಿತ್ ಶಾ ಮನೆ ಎದುರು ಕುಕಿ ಬುಡಕಟ್ಟು ಮಹಿಳೆಯರಿಂದ ಪ್ರತಿಭಟನೆ

ಮಣಿಪುರದ ಕುಕಿ ಬುಡಕಟ್ಟಿನ ಮಹಿಳೆಯರು ರಾಜ್ಯದಲ್ಲಿ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರವನ್ನು ತಡೆಯುವಂತೆ ಮನವಿಯ ಫಲಕಗಳನ್ನು ಹಿಡಿದು ನವದೆಹಲಿಯಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನಿವಾಸದ ಹೊರಗೆ ಬುಧವಾರ ಪ್ರತಿಭಟನೆ ನಡೆಸಿದರು.


ಈ ಬಗ್ಗೆ ಮಾತನಾಡಿದ ಪ್ರತಿಭಟನಾಕಾರರು, ”ಶಾಂತಿ ಮರುಸ್ಥಾಪಿಸಲಾಗುವುದು ಎಂದು ಅವರು ಭರವಸೆ ನೀಡಿದರು ಆದರೆ ಮಣಿಪುರದಲ್ಲಿ ನಮ್ಮ ಸಮುದಾಯದ ಮೇಲೆ ದಾಳಿಗಳು ಮುಂದುವರೆಯುತ್ತಲೇ ಇವೆ. ನಮ್ಮವರ ಜೀವಗಳು ಅಪಾಯದಲ್ಲಿದೆ. ಗೃಹ ಸಚಿವ ಮತ್ತು ಪ್ರಧಾನಿ ನರೇಂದ್ರ ಮೋದಿ ಮಾತ್ರ ನಮಗೆ ಸಹಾಯ ಮಾಡಬೇಕು” ಎಂದು ಹೇಳಿದರು.

ಮಣಿಪುರದಲ್ಲಿ ಭದ್ರತಾ ಪಡೆಗಳು ಮತ್ತು ದಂಗೆಕೋರರ ನಡುವಿನ ಗುಂಡಿನ ಕಾಳಗದಲ್ಲಿ ಮಂಗಳವಾರ ಮುಂಜಾನೆ ಒಬ್ಬ ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ಗಾಯಗೊಂಡಿದ್ದಾರೆ ಎಂದು ಸೇನೆಯು ತಿಳಿಸಿದೆ, ಕಾರ್ಯಾಚರಣೆಯಲ್ಲಿ ಅನೇಕ ಬಂಡುಕೋರರನ್ನು ಕೊಲ್ಲಲಾಯಿತು ಎಮದು ಹೇಳಲಾಗಿದೆ.

ಮ್ಯಾನ್ಮಾರ್‌ನ ಗಡಿಯಲ್ಲಿರುವ ಈಶಾನ್ಯ ರಾಜ್ಯವು ಕಳೆದ ಕೆಲವು ವಾರಗಳಲ್ಲಿ ಉದ್ವಿಗ್ನವಾಗಿದೆ, ಗಲಭೆಗಳು ಮತ್ತು ಜನಾಂಗೀಯ ಘರ್ಷಣೆಗಳು ಮೇ ಆರಂಭದಿಂದ ಇಲ್ಲಿಯವರೆಗೆ ಕನಿಷ್ಠ 80 ಜನರು ಸಾವಿಗೀಡಾಗಿದ್ದಾರೆ. 35,000 ಜನರನ್ನು ಸ್ಥಳಾಂತರಿಸಿವೆ. ಕಳೆದ ತಿಂಗಳು ಭದ್ರತಾ ಪಡೆಗಳು ಪ್ರತಿದಾಳಿ ನಡೆಸಿದ ನಂತರ 30ಕ್ಕೂ ಹೆಚ್ಚು ದಂಗೆಕೋರರು ಸಾವಿಗೀಡಾದರು.

”ಜೂನ್ 05/06 ರ ರಾತ್ರಿಯಿಡೀ ಭದ್ರತಾ ಪಡೆಗಳು ಮತ್ತು ದಂಗೆಕೋರರ ಗುಂಪಿನ ನಡುವೆ ಗುಂಡಿನ ದಾಳಿ ನಡೆದಿದೆ. ಭದ್ರತಾ ಪಡೆಗಳು ಅವರ ವಿರುದ್ದ ಪರಿಣಾಮಕಾರಿಯಾಗಿ ಪ್ರತೀಕಾರ ತೀರಿಸಿಕೊಂಡವು” ಎಂದು ಭಾರತೀಯ ಸೇನೆಯು ಟ್ವಿಟರ್‌ನಲ್ಲಿ ತಿಳಿಸಿದೆ.

ಗಡಿ ಭದ್ರತಾ ಪಡೆಯ ಒಬ್ಬ ಯೋಧ ಸಾವನ್ನಪ್ಪಿದ್ದು, ಭಾರತದ ಈಶಾನ್ಯ ಭಾಗದಲ್ಲಿ ಅರೆಸೇನಾ ಪಡೆ ಅಸ್ಸಾಂ ರೈಫಲ್ಸ್‌ನ ಇಬ್ಬರು ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಅದು ಹೇಳಿದೆ. ”ಶೋಧನಾ ಕಾರ್ಯಾಚರಣೆಗಳು ಪ್ರಗತಿಯಲ್ಲಿವೆ” ಎಂದು ಸೇನೆ ಹೇಳಿದೆ.

ಹಿಂಸಾಚಾರಕ್ಕೆ ಕಾರಣವೇನು?


ಮೇ 3ರಂದು ಮಣಿಪುರದಲ್ಲಿ ಹಿಂಸಾಚಾರ ಭುಗಿಲೆದ್ದಿತು, ಮೈತಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂಬ ಬೇಡಿಕೆಯನ್ನು ವಿರೋಧಿಸಿ ಮಣಿಪುರದ ಎಲ್ಲಾ ಬುಡಕಟ್ಟು ವಿದ್ಯಾರ್ಥಿಗಳ ಒಕ್ಕೂಟವು ಆಯೋಜಿಸಿದ್ದ ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು.

ಪ್ರತಿಭಟನಾಕಾರರಲ್ಲಿ ಮಣಿಪುರದ ದೊಡ್ಡ ಬುಡಕಟ್ಟು ಸಮುದಾಯಗಳಲ್ಲಿ ಒಂದಾದ ಕುಕಿಗಳು ಸೇರಿದ್ದಾರೆ. ಅವರು ರಾಜ್ಯ ಸರ್ಕಾರದೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದಾರೆ ಮತ್ತು ನಿರ್ದಿಷ್ಟವಾಗಿ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರು ಮೈತಿ ಸಮುದಾಯದ ಪರವಾಗಿದ್ದಾರೆ ಎಂದು ಸಮುದಾಯವು ಹೇಳಿಕೊಳ್ಳುತ್ತದೆ. ಈ ಘರ್ಷಣೆಯಲ್ಲಿ ಕನಿಷ್ಠ 80 ಜನರು ಸಾವನ್ನಪ್ಪಿದ್ದಾರೆ.

ರಾಜ್ಯದ ಜನಸಂಖ್ಯೆಯ 60% ರಷ್ಟಿರುವ ಮೈತಿ ಸಮುದಾಯದ ಸದಸ್ಯರು ಹೆಚ್ಚಾಗಿ ಇಂಫಾಲ್ ಕಣಿವೆಯಲ್ಲಿ ಕೇಂದ್ರೀಕೃತರಾಗಿದ್ದಾರೆ. ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶಿ ಪ್ರಜೆಗಳಿಂದ ದೊಡ್ಡ ಪ್ರಮಾಣದ ಅಕ್ರಮ ವಲಸೆಯಿಂದಾಗಿ ತೊಂದರೆಗಳನ್ನು ಎದುರಿಸುತ್ತಿದೆ ಎಂದು ಸಮುದಾಯವು ಹೇಳಿಕೊಂಡಿದೆ. ಕಾನೂನಿನ ಪ್ರಕಾರ ರಾಜ್ಯದ ಗುಡ್ಡಗಾಡು ಪ್ರದೇಶಗಳಲ್ಲಿ ಮೈಟೀಸ್‌ಗೆ ನೆಲೆಸಲು ಅವಕಾಶವಿಲ್ಲ.

ಮಣಿಪುರದ ಬುಡಕಟ್ಟು ಬೆಟ್ಟದ ಜಿಲ್ಲೆಗಳು ಸಂವಿಧಾನದ ಆರ್ಟಿಕಲ್ 371C ಅಡಿಯಲ್ಲಿ ವಿಶೇಷ ರಕ್ಷಣೆಗಳನ್ನು ಅನುಭವಿಸುತ್ತವೆ, ಅದು ಜಿಲ್ಲೆಗಳ ಮೇಲೆ ಪರಿಣಾಮ ಬೀರುವ ಎಲ್ಲಾ ಕಾನೂನುಗಳನ್ನು ಮಣಿಪುರ ವಿಧಾನಸಭೆಯ ಗುಡ್ಡಗಾಡು ಪ್ರದೇಶಗಳ ಸಮಿತಿಯು ಪರಿಶೀಲಿಸಬೇಕು ಎಂದು ಹೇಳುತ್ತದೆ.

ವಿಶ್ವಾಸ ಹೆಚ್ಚಿಸುವ ಕ್ರಮಗಳ ಭಾಗವಾಗಿ ಕಳೆದ ವಾರ ನಾಲ್ಕು ದಿನಗಳ ಕಾಲ ರಾಜ್ಯಕ್ಕೆ ಭೇಟಿ ನೀಡಿದ ಅಮಿತ್ ಶಾ ಅವರು ಎಲ್ಲಾ ಸಮುದಾಯಗಳ ಪ್ರತಿನಿಧಿಗಳು ಮತ್ತು ಮುಖಂಡರನ್ನು ಭೇಟಿಯಾಗಿದ್ದರು.

ಮಣಿಪುರದ ಶಾಂತಿ ಮತ್ತು ಸಮೃದ್ಧಿಯು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಎಂದು ಗೃಹ ಸಚಿವರು ಹೇಳಿದ್ದಾರೆ ಮತ್ತು ಶಾಂತಿ ಕದಡುವ ಯಾವುದೇ ಚಟುವಟಿಕೆಗಳನ್ನು ಕಟ್ಟುನಿಟ್ಟಾಗಿ ಎದುರಿಸಲು ಭದ್ರತಾ ಪಡೆಗಳಿಗೆ ಸೂಚನೆ ನೀಡಿದ್ದಾರೆ.
Previous Post Next Post

Ads

Ads

نموذج الاتصال

×